Saturday, November 29, 2014

ಅಮೃತವಾಣಿ - ೫



ಅರ್ಥಾ ವೈವಾಚಿ ನಿಯತಾಃ ವಾಙ್ಮೂಲಾ: ವಾಚಿ ಮಿಶ್ರಿತಾಃ |
ಯೋ ವೈತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ ||

ಅರ್ಥವು ಮಾತಿನಲ್ಲಿ ಅಡಗಿದೆ, ಅರ್ಥಕ್ಕೆ ಮಾತೇ ಮೂಲ, ಅರ್ಥ ಹಾಗೂ ಮಾತುಗಳು ಪರಸ್ಪರ ಬೆರೆತಿವೆ. ಯಾರು ಮಾತನ್ನು ಸುಳ್ಳಾದ, ವಿಪರೀತವಾದ ಅರ್ಥವನ್ನು ಕೊಡುವಂತೆ ಮಾತನಾಡುತ್ತಾರೆಯೋ, ಅವರು ಎಲ್ಲ ರೀತಿಯಲ್ಲೂ ಕಳ್ಳತನವನ್ನು ಮಾಡಿದ ದೋ‍ಷಕ್ಕೆ ಭಾಗಿಯಾಗುತ್ತಾರೆ. ಇಂಥವರು ಜಗತ್ತಿನಲ್ಲಿ ಅನರ್ಥವನ್ನು ಉಂಟು ಮಾಡುವ ಅಪಾಯವನ್ನು ತಂದೊಡ್ಡುತ್ತಾರೆ. ಆದ್ದರಿಂದ ಯಾವಾಗಲೂ ಹಿತಕರವಾಗಿರುವ, ನೈಜ ಅರ್ಥಗಳನ್ನು ಒಳಗೊಂಡ ಮಾತನ್ನೇ ಆಡುತ್ತಿರಬೇಕು.


ನಾರದ ಸ್ಮೃತಿ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ



Wednesday, January 1, 2014

ಅಮೃತವಾಣಿ - ೪

ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ವವಿತ್ |
ವಿಷಸ್ಯೇವೋದ್ವಿಜೇನ್ನಿತ್ಯಂ ಸಮ್ಮಾನಸ್ಯ ವಿಚಕ್ಷಣಃ ||
ತತ್ವಜ್ನಾನಿಯಾದ ಸಾಧಕ ಪುರು‍ಷನು ಯಾರಾದರೂ ತನ್ನನ್ನು ನಿಂದನೆ ಮಾಡಿದರೆ,
ಅವಮಾನ ಮಾಡಿದರೆ ಅದನ್ನು ಅಮೃತವೆಂದೇ ಭಾವಿಸಿ ಸಂತೃಪ್ತನಾಗಿ ಜೀವಿಸಬೇಕು.
ಒಂದು ವೇಳೆ ಯಾರಾದರೂ ತನ್ನ ಬಗ್ಗೆ ಪ್ರಶಂಸೆ ಮಾಡಿದರೆ, ಸನ್ಮಾನವನ್ನು ಮಾಡಿದರೆ ಅದನ್ನು ವಿ‌ಷವೆಂದು ತಿಳಿದು ಉದ್ವಿಗ್ನ ಮನಸ್ಕನಾಗಿ ಮೌನಿಯಾಗಿದ್ದು ಬಿಡಬೇಕು.
ಹೀಗೆ ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ ಸಮಚಿತ್ತದಿಂದ ಇರುವುದೇ ಮಹತ್ತರವಾದ ಸಾಧನೆ ಎನಿಸಿದೆ.

ಜೈಗೀಷವ್ಯ ವಚನ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ