Saturday, January 3, 2015

ಅಮೃತವಾಣಿ - ೬

ರಥಂ ಶರೀರಂ ಪುರುಷಸ್ಯ ರಾಜನ್ ಆತ್ಮಾ ನಿಯತೇಂದ್ರಿಯಾಣ್ಯಸ್ಯ ಚಾಶ್ವಾಃ |
ತೈರಪ್ರಮತ್ತಃ ಕುಶಲೀ ಸದಶ್ವೈರ್ದಾಂತೈಃ ಸುಖಂ ಯಾತಿ ರಥೀವ ಧೀರಃ ||

ಮಾನವನ ಶರೀರವೇ ರಥ. ಮನಸ್ಸು ಈ ರಥದ ಸಾರಥಿ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳು ರಥದ ಕುದುರೆಗಳು. ಇವುಗಳನ್ನು ವಶದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಇರುವ ಜಾಣನು (ಜೀವಾತ್ಮನು) ನಿಯಂತ್ರಿತವಾದ ಕುದುರೆಗಳಿಂದ ಶೋಭಿಸುವ ರಥದಲ್ಲಿ ಕುಳಿತು ಸುಖವಾಗಿ ಪಯಣಿಸುವ ಧೀರ ರಥಿಕನಂತೆ, ಸುಗಮವಾಗಿ ಬಾಳಿನಲ್ಲಿ ಪಯಣಿಸುತ್ತಾನೆ.

ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ / ಅಮೃತವಾಣಿ



Saturday, November 29, 2014

ಅಮೃತವಾಣಿ - ೫



ಅರ್ಥಾ ವೈವಾಚಿ ನಿಯತಾಃ ವಾಙ್ಮೂಲಾ: ವಾಚಿ ಮಿಶ್ರಿತಾಃ |
ಯೋ ವೈತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ ||

ಅರ್ಥವು ಮಾತಿನಲ್ಲಿ ಅಡಗಿದೆ, ಅರ್ಥಕ್ಕೆ ಮಾತೇ ಮೂಲ, ಅರ್ಥ ಹಾಗೂ ಮಾತುಗಳು ಪರಸ್ಪರ ಬೆರೆತಿವೆ. ಯಾರು ಮಾತನ್ನು ಸುಳ್ಳಾದ, ವಿಪರೀತವಾದ ಅರ್ಥವನ್ನು ಕೊಡುವಂತೆ ಮಾತನಾಡುತ್ತಾರೆಯೋ, ಅವರು ಎಲ್ಲ ರೀತಿಯಲ್ಲೂ ಕಳ್ಳತನವನ್ನು ಮಾಡಿದ ದೋ‍ಷಕ್ಕೆ ಭಾಗಿಯಾಗುತ್ತಾರೆ. ಇಂಥವರು ಜಗತ್ತಿನಲ್ಲಿ ಅನರ್ಥವನ್ನು ಉಂಟು ಮಾಡುವ ಅಪಾಯವನ್ನು ತಂದೊಡ್ಡುತ್ತಾರೆ. ಆದ್ದರಿಂದ ಯಾವಾಗಲೂ ಹಿತಕರವಾಗಿರುವ, ನೈಜ ಅರ್ಥಗಳನ್ನು ಒಳಗೊಂಡ ಮಾತನ್ನೇ ಆಡುತ್ತಿರಬೇಕು.


ನಾರದ ಸ್ಮೃತಿ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ



Wednesday, January 1, 2014

ಅಮೃತವಾಣಿ - ೪

ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ವವಿತ್ |
ವಿಷಸ್ಯೇವೋದ್ವಿಜೇನ್ನಿತ್ಯಂ ಸಮ್ಮಾನಸ್ಯ ವಿಚಕ್ಷಣಃ ||
ತತ್ವಜ್ನಾನಿಯಾದ ಸಾಧಕ ಪುರು‍ಷನು ಯಾರಾದರೂ ತನ್ನನ್ನು ನಿಂದನೆ ಮಾಡಿದರೆ,
ಅವಮಾನ ಮಾಡಿದರೆ ಅದನ್ನು ಅಮೃತವೆಂದೇ ಭಾವಿಸಿ ಸಂತೃಪ್ತನಾಗಿ ಜೀವಿಸಬೇಕು.
ಒಂದು ವೇಳೆ ಯಾರಾದರೂ ತನ್ನ ಬಗ್ಗೆ ಪ್ರಶಂಸೆ ಮಾಡಿದರೆ, ಸನ್ಮಾನವನ್ನು ಮಾಡಿದರೆ ಅದನ್ನು ವಿ‌ಷವೆಂದು ತಿಳಿದು ಉದ್ವಿಗ್ನ ಮನಸ್ಕನಾಗಿ ಮೌನಿಯಾಗಿದ್ದು ಬಿಡಬೇಕು.
ಹೀಗೆ ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ ಸಮಚಿತ್ತದಿಂದ ಇರುವುದೇ ಮಹತ್ತರವಾದ ಸಾಧನೆ ಎನಿಸಿದೆ.

ಜೈಗೀಷವ್ಯ ವಚನ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Monday, December 2, 2013

ಅಮೃತವಾಣಿ - ೩

ಅಧನಂ ದುರ್ಬಲಂ ಪ್ರಾಹುಃ ಧನೇನ ಬಲವಾನ್ ಭವೇತ್ ಸರ್ವಂ ಧನವತಾ ಪ್ರಾಪ್ಯಂ ಸರ್ವಂ ತರತಿ ಕೋಶವಾನ್ |
ಕೋಶೇನ ಧರ್ಮಃ ಕಾಮಶ್ಚ ಪರಲೋಕಸ್ತಥಾ ಹ್ಯಯಮ್ ತಂ ಚ ಧರ್ಮೇಣ ಲಿಪ್ಸೇತ ನಾಧರ್ಮೇಣ ಕದಾಚನ ||
ಬಲಾಬಲಗಳ ತೀರ್ಮಾನವಾಗುವುದೇ ಧನದಿಂದ, ಈ ಲೋಕದಲ್ಲಿ ಧನವಿಲ್ಲದವನನ್ನು ದುರ್ಬಲನೆಂದು ಕರೆಯುತ್ತಾರೆ. ಧನವಿದ್ದವನು ಬಲಶಾಲಿಯೆನಿಸುತ್ತಾನೆ. ಸನ್ಮಾನ, ಗೌರವ, ಪ್ರಶಸ್ತಿ, ಮುಂತಾದವುಗಳು ಹಣವಂತನಿಗೇ ಲಭಿಸುತ್ತವೆ. ಧನಸಮೃದ್ಧಿಯುಳ್ಳವನು ಎಲ್ಲ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ. ಅರ್ಥಸಂಪಾದನೆಯಿಂದ ಧರ್ಮ ಹಾಗೂ ಕಾಮಗಳು, ಇಹಲೋಕ ಮತ್ತು ಪರಲೋಕಗಳು ಪ್ರಾಪ್ತವಾಗುತ್ತವೆ.
ಈ ವಿ‌ಷಯದಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಧನವನ್ನು ಧರ್ಮ, ನ್ಯಾಯಗಳಿಂದಲೇ ಗಳಿಸಬೇಕು. ಯಾವಕಾರಣದಿಂದಲೂ ಅಧರ್ಮ, ಅನ್ಯಾಯಗಳಿಂದ ಧನ ಸಂಪಾದಿಸಬಾರದು.
ಅಧರ್ಮದ ಧನ ಫಲಿಸುವುದೂ ಇಲ್ಲ.
  
 ~ ಶಾಂತಿಪರ್ವ ~ ಮಹಾಭಾರತ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Friday, November 8, 2013

ಅಮೃತವಾಣಿ - ೨

ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ |
ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ || 
ಮಕ್ಕಳು ಹುಟ್ಟುವಾಗ ತಂದೆ-ತಾಯಿಗಳು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಹುಟ್ಟದಿದ್ದರೆ ಅದಕ್ಕಾಗಿ ಕೊರಗುತ್ತಾರೆ.
ಹುಟ್ಟಿದ ಮೇಲೆ ಅವರನ್ನು ದೊಡ್ಡ ವ್ಯಕ್ತಿಗಳಾಗಿ ಹೇಗೆ ಬೆಳೆಸುವುದು ಎಂದು ಆಲೋಚಿಸುತ್ತಾರೆ. 
ಅದಕ್ಕಾಗಿ ತಮ್ಮ ಪ್ರಾಣ-ಧನಗಳನ್ನು ಪರಿಗಣಿಸದೇ ಜೀವನದುದ್ದಕ್ಕೂ ಹೋರಾಡುತ್ತಾರೆ. ಮಕ್ಕಳ ಅಭ್ಯುದಯಕ್ಕಾಗಿ ಕಂಡ ಕಂಡ ದೈವಗಳಿಗೆ ಹರಕೆ ಹೊರತ್ತಾರೆ. ಅಭೀಷ್ಟ ಸಿದ್ಧಿಯಾದರೆ ಅವರಷ್ಟು ಸಂಭ್ರಮ ಪಡುವವರೇ ಇಲ್ಲ.
ಇಂಥ ತಂದೆ ತಾಯಿಗಳ ಋಣವನ್ನು ತೀರಿಸಲು ಮಕ್ಕಳಾದವರು ನೂರು ವರ್ಷ ಸೇವೆ ಮಾಡಿದರೂ ಸಾಧ್ಯವಿಲ್ಲ. 

~ ಮನುಸ್ಮೃತಿ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ 

Friday, November 1, 2013

ಅಮೃತವಾಣಿ - ೧

ಲೋಕದ್ವಯಪ್ರತಿಭಯೈಕನಿದಾನಮೇತದ್ಧಿಕ್ ಪ್ರಾಣಿನಾಂ ಋಣಮಹೋ ಪರಿಣಾಮಘೋರಮ್ |
ಏಕಃ ಸ ಏವ ಹಿ ಪುಮಾನ್ ಪರಮಸ್ತ್ರಿಲೋಕೇ ಕ್ರುದ್ಧಸ್ಯ ಯೇನ ಧನಿಕಸ್ಯ ಮುಖಂ ನ ದೃಷ್ಟಮ್ ||
ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಮನುಷ್ಯರಿಗೆ ಘನಘೋರವಾದ ದುಃಖಾಂತ್ಯದ ದರ್ಶನವನ್ನು ಮಾಡಿಸುವ ಭಯದ ಮೂಲವೇ ಸಾಲ.
ಎಲ್ಲ ಬಾಧೆಗಳಿಗಿಂತಲೂ ಸಾಲಬಾಧೆ ಭಯಂಕರವಾದದ್ದು. ಕೋಪ ಮಾಡಿಕೊಂಡು ಜನರ ಮಧ್ಯದಲ್ಲಿಯೇ ಅವಮಾನ ಮಾಡುವ, ಸಾಲ ಕೊಟ್ಟ ಶ್ರೀಮಂತನ ಕೆಂಗಣ್ಣಿಗೆ ಯಾವನು ಗುರಿಯಾಗುವುದಿಲ್ಲವೋ ಆ ಮನುಷ್ಯನು ಮೂರು ಲೋಕಗಳಲ್ಲಿಯೇ ಧನ್ಯ ಎಂದು ತಿಳಿಯಬೇಕು.
ಇದಕ್ಕೆ ಪೂರಕವಾಗಿ ಸಾಲವನ್ನು ತರುವಾಗ ಹಾಲು-ಹಣ್ಣುಂಬಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ತನ್ನ ವಚನದಲ್ಲಿ ಮಾರ್ಮಿಕವಾಗಿ ನುಡಿದಿದ್ದಾನೆ. 
 ~ ಚಂಡಕೌಶಿಕ ನಾಟಕ / ಸಂಗ್ರಹ, ವ್ಯಾಖ್ಯಾನ : ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Wednesday, November 21, 2012

ಕುರುಡ ...!!!

ಅರಸಿದಾಗ ದಾಹ ಹೆಚ್ಚಿತೇ ಹೊರತು
ಮನ ತಣಿಯದೇ ಹೋಯಿತೀಗ,
ಆ ಶೋಧ ಯಾಕೆಂದು ಅರಿಯಲು
ಏನಂದು ತವಕದಿ ಕಾಣಲು
ಕಣ್ಣಿದ್ದು ಕುರುಡನಾದೆನೀಗ...!!!