Saturday, April 9, 2022

ಅಮೃತವಾಣಿ – 19


ಯಥಾ ರಾಜನ್ ಪ್ರಜಾಃ ಸರ್ವಾಃ ಸೂರ್ಯಃ ಪಾತಿ ಗಭಸ್ತಿಭಿಃ|

ಹಂತಿ ಚೈವ ತಥೈವ ತ್ವಂ ಸವಿತುಃ ಸದೃಶೋಭವ||

ಸರ್ವಕಾಲದಲ್ಲಿಯೂ ಸೌಮ್ಯವಾದ ಅಥವಾ ಅಹಿಂಸಾವಾದಗಳಿಂದ ಪ್ರಯೋಜನವು ಫಲಿಸುವುದಿಲ್ಲ. ಅದರಲ್ಲಿಯೂ ದುಷ್ಟರ-ಉಗ್ರರ ವಿಷಯದಲ್ಲಿ ಅಹಿಂಸೆಯು ಹಾಸ್ಯಾಸ್ಪದವಾಗುತ್ತದೆ. ಅಲ್ಲಿ ಶಿಕ್ಷೆಯು ಕಡ್ಡಾಯವಾಗಬೇಕು. ಸೂರ್ಯನು ಮುಂಜಾನೆ ಮತ್ತು ಸಂಜೆ ತನ್ನ ಕೋಮಲ ಕಿರಣಗಳಿಂದ ಜನತೆಯನ್ನು ಸಂತೋಷಪಡಿಸುತ್ತಾನೆ. ಮಧ್ಯಾಹ್ನ ಉಷ್ಣಕಿರಣಗಳಿಂದ ಪ್ರಖರ ಎನಿಸುತ್ತಾನೆ. ಆಗಲೇ ಸೂರ್ಯನ ಅಸ್ತಿತ್ವದ ಜ್ಞಾನವಾಗುತ್ತದೆ. ಹಾಗೆಯೇ ಉಗ್ರವಾದವನ್ನು ದಮನ ಮಾಡಿದಾಗಲೇ ಧರ್ಮದ ಸಂಸ್ಥಾಪನೆಯಾಗುತ್ತದೆ. 


|ವನಪರ್ವ-ಮಹಾಭಾರತ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ

ಮೂಲ ಸಂಗ್ರಹ: ವಿಜಯವಾಣಿ ದಿನಪತ್ರಿಕೆ

Friday, January 7, 2022

ಅಮೃತವಾಣಿ – ೧೮

ಯೋವಜಾನಾತಿ ಶಕ್ತೋಪಿ ದ್ವೇಷಾಲ್ಲೋಭಾನ್ಮದಾದಪಿ |

ಪೂರ್ವೋಕ್ತಪೋಷಾನ್ ಸಂಪ್ರೇಯಾನ್ ಮೃತೋ ನಿರಯಮುಲ್ಬಣಮ್  ||

ಅಕೀರ್ತಿಂ ಲಭ್ಯತೇ ಜೀವನ್ನಕೀರ್ತೇರ್ಮರಣಂ ವರಂ |

ನೈವ ಗೃಹ್ಣಂತಿ ನಾಮಾಸ್ಯ ಯೋಪಕಿರ್ತಯ ಜೀವತಿ ||

 

ಧನ-ಸಂಪತ್ತುಗಳ ಸಾಧನವಿದ್ದೂ ಸ್ವತಃ ಪೋಷಣೆ ಮಾಡಲು ಸಮರ್ಥನಾಗಿದ್ದರೂ ಆಶ್ರಯಿಸಿ ಬಂದ ಬಂಧುಜನರನ್ನು ಪೋಷ್ಯವರ್ಗದವರನ್ನು ದ್ವೇಷದಿಂದ, ಲೋಭದಿಂದ ಅಥವಾ ಗರ್ವದಿಂದ ಪೋಷಿಸದೇ ಕರ್ತವ್ಯಚ್ಯುತನಾಗಿ ತಿರಸ್ಕಾರಮಾಡುವವನು ಅಪಕೀರ್ತಿಗೆ ಒಳಗಾಗುತ್ತಾನೆ. ಒಂದು ರೀತಿಯಲ್ಲಿ ಬದುಕಿದ್ದರೂ ಸತ್ತಂತೆ. ಇಂಥವನ ಹೆಸರನ್ನು ಹೇಳಲು ಯಾರೂ ಬಯಸುವುದಿಲ್ಲ. ಆದ್ದರಿಂದ ದೇವರು ಅನುಕೂಲ ಕೊಟ್ಟಾಗ ಆಶ್ರಯಿಸಿ ಬರುವವರನ್ನು ಪೋಷಿಸಬೇಕು.  

ಕೃಪೆ/ಮೂಲ ಸಂಗ್ರಹ: ವಿಜಯವಾಣಿ, ||ಶ್ರೀ ವಿಷ್ಣುರಹಸ್ಯ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ

 

Sunday, December 12, 2021

 ಅಮೃತವಾಣಿ - 17

ಪರಸ್ಪರಸ್ಯ ಮರ್ಮಾಣಿ ಯೇ ಭಾಷಂತೇ ನರಾಧಮಾಃ |

ತೇ ಏವ ವಿಲಯಂ ಯಾಂತಿ ವಲ್ಮೀಕೋದರ ಸರ್ಪವತ್‌ ||


ಸ್ವಹಿತಾಸಕ್ತಿಯ ರಕ್ಷಣೆಗಾಗಿ ಪರರ ರಹಸ್ಯಗಳನ್ನು ಬಯಲುಮಾಡಿ ನಿಂದನೀಯ ಮಾತುಗಳನ್ನಾಡುವವರು ಹುತ್ತದಲ್ಲಿ ಸಿಕ್ಕ ಹಾವಿನಂತೆ ನಿಶ್ಚಿತವಾಗಿ ವಿನಾಶ ಹೊಂದುತ್ತಾರೆ. ಅನ್ಯರ ರಹಸ್ಯಗಳನ್ನು ಬಯಲುಮಾಡುವ ಮೊದಲು ತನ್ನ ಚಾರಿತ್ರ್ಯದ ಬಗ್ಗೆ ಯೋಚಿಸಬೇಕು. ಹಾಗೂ ಮುಂದೆ ಆಗುವ ಸ್ಥಿತಿಗಳನ್ನು ಪೂರ್ವಾಪರವಾಗಿ ವಿಚಾರಿಸಿ ಮುಂದಿನ ಹೆಜ್ಜೆಯನ್ನಿಡಬೇಕು. ಯಾವುದೇ ಕಾರಣಕ್ಕೂ ಅವಸರಪಡಬಾರದು.

 

ಕೃಪೆ/ಮೂಲ ಸಂಗ್ರಹ:

| ಚಾಣಕ್ಯನೀತಿದರ್ಪಣ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

Sunday, April 14, 2019

ಅಮೃತವಾಣಿ - ೧೬

ಯತ್ರ ಸರ್ವೇsಪಿ ನೇತಾರಃ ಸರ್ವೇ ಪಂಡಿತಮಾನಿನಃ |
ಸರ್ವೇ ಮಹತ್ವಮಿಚ್ಛಂತಿ ತತ್ರ ಕಾರ್ಯಂ ವಿನಶ್ಯತಿ ||

ಒಂದು ಸಂಸ್ಥೆ ಅಥವಾ ಸಮೂಹ ಇದ್ದಾಗ ಅಲ್ಲಿ ಎಲ್ಲರೂ ತಾವೇ ನಾಯಕರಾಗಬೇಕು,
ತಮ್ಮ ಮಾತೇ ಅಂತಿಮವಾಗಬೇಕು ಎಂಬ ಮನೋಭಾವ ಇದ್ದರೆ ಆ ಸಂಸ್ಥೆ-ಸಮೂಹಗಳು ಅಧಃಪತನ ಹೊಂದುತ್ತವೆ.
ತನ್ನನ್ನು ಹೊರತುಪಡಿಸಿ ಅನ್ಯ ಪಂಡಿತನೇ ಇಲ್ಲ, ಜನರೆಲ್ಲ ತನ್ನನ್ನೇ ಪಂಡಿತ ಎಂದು ತಿಳಿಯುತ್ತಾರೆ ಎಂದು ತಿಳಿಯುವುದೂ ಮೂರ್ಖತನವೇ ಆಗಿದೆ.
ಹಾಗೆಯೇ ಎಲ್ಲೆಡೆಯೂ ಪ್ರಥಮ ಸ್ಥಾನ ತನ್ನದೇ ಆಗಬೇಕು, ತನಗೆ ಮಹತ್ವ ಸಿಗಬೇಕು ಎಂದು ಭಾವಿಸಿದರೆ - ಆ ರೀತಿಯಲ್ಲಿ ವರ್ತಿಸಿದರೆ ಕಾರ್ಯ ವಿನಾಶವಾಗುತ್ತದೆ. ಆದ್ದರಿಂದ ಸೌಜನ್ಯ-ವಿನಯಗಳನ್ನು ಜೀವನದಲ್ಲಿ ಅವಶ್ಯವಾಗಿ ರೂಢಿಸಿಕೊಳ್ಳಬೇಕು.

| ನೀತಿಮುಕ್ತಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

Friday, April 12, 2019

ಅಮೃತವಾಣಿ - ೧೫


ವಿನಾ ಕಾರ್ಯೇಣ ಯೇ ಮೂಢಾ ಗಚ್ಛಂತಿ ಪರಮಂದಿರಂ|
ಅವಶ್ಯಂ ಲಘುತಾಂ ಯಾಂತಿ ಕೃಷ್ಣಪಕ್ಷೇ ಯಥಾ ಶಶೀ||

ಸುಜ್ಞಾನಿಗಳು, ಗುರುಗಳು ಇವರನ್ನು ಹೊರತುಪಡಿಸಿ ವಿನಾಕಾರಣ ಇತರರ (ಅದರಲ್ಲಿಯೂ ವಿಶೇಷವಾಗಿ ಅಹಂಕಾರಯುಕ್ತರಾದ ಧನವಂತರ) ನಿವಾಸಗಳಿಗೆ ವೃಥಾ ಹೋಗಬಾರದು. ಆಮಂತ್ರಣ ಇದ್ದರೆ, ಅಲ್ಲಿ ಪ್ರೀತಿ ವಿಶ್ವಾಸಗಳು ಇದ್ದರೆ ಮಾತ್ರ ಹೋಗಬೇಕು. ಕರೆಯದೆ ಇದ್ದರೂ ಅಲ್ಲಿಗೆ ಹೋದರೆ ಅಂಥವರು ಮೂರ್ಖರೇ ಸರಿ.

|| ಸುವಚನರತ್ನಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ