Saturday, April 9, 2022

ಅಮೃತವಾಣಿ – 19


ಯಥಾ ರಾಜನ್ ಪ್ರಜಾಃ ಸರ್ವಾಃ ಸೂರ್ಯಃ ಪಾತಿ ಗಭಸ್ತಿಭಿಃ|

ಹಂತಿ ಚೈವ ತಥೈವ ತ್ವಂ ಸವಿತುಃ ಸದೃಶೋಭವ||

ಸರ್ವಕಾಲದಲ್ಲಿಯೂ ಸೌಮ್ಯವಾದ ಅಥವಾ ಅಹಿಂಸಾವಾದಗಳಿಂದ ಪ್ರಯೋಜನವು ಫಲಿಸುವುದಿಲ್ಲ. ಅದರಲ್ಲಿಯೂ ದುಷ್ಟರ-ಉಗ್ರರ ವಿಷಯದಲ್ಲಿ ಅಹಿಂಸೆಯು ಹಾಸ್ಯಾಸ್ಪದವಾಗುತ್ತದೆ. ಅಲ್ಲಿ ಶಿಕ್ಷೆಯು ಕಡ್ಡಾಯವಾಗಬೇಕು. ಸೂರ್ಯನು ಮುಂಜಾನೆ ಮತ್ತು ಸಂಜೆ ತನ್ನ ಕೋಮಲ ಕಿರಣಗಳಿಂದ ಜನತೆಯನ್ನು ಸಂತೋಷಪಡಿಸುತ್ತಾನೆ. ಮಧ್ಯಾಹ್ನ ಉಷ್ಣಕಿರಣಗಳಿಂದ ಪ್ರಖರ ಎನಿಸುತ್ತಾನೆ. ಆಗಲೇ ಸೂರ್ಯನ ಅಸ್ತಿತ್ವದ ಜ್ಞಾನವಾಗುತ್ತದೆ. ಹಾಗೆಯೇ ಉಗ್ರವಾದವನ್ನು ದಮನ ಮಾಡಿದಾಗಲೇ ಧರ್ಮದ ಸಂಸ್ಥಾಪನೆಯಾಗುತ್ತದೆ. 


|ವನಪರ್ವ-ಮಹಾಭಾರತ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ

ಮೂಲ ಸಂಗ್ರಹ: ವಿಜಯವಾಣಿ ದಿನಪತ್ರಿಕೆ

Friday, January 7, 2022

ಅಮೃತವಾಣಿ – ೧೮

ಯೋವಜಾನಾತಿ ಶಕ್ತೋಪಿ ದ್ವೇಷಾಲ್ಲೋಭಾನ್ಮದಾದಪಿ |

ಪೂರ್ವೋಕ್ತಪೋಷಾನ್ ಸಂಪ್ರೇಯಾನ್ ಮೃತೋ ನಿರಯಮುಲ್ಬಣಮ್  ||

ಅಕೀರ್ತಿಂ ಲಭ್ಯತೇ ಜೀವನ್ನಕೀರ್ತೇರ್ಮರಣಂ ವರಂ |

ನೈವ ಗೃಹ್ಣಂತಿ ನಾಮಾಸ್ಯ ಯೋಪಕಿರ್ತಯ ಜೀವತಿ ||

 

ಧನ-ಸಂಪತ್ತುಗಳ ಸಾಧನವಿದ್ದೂ ಸ್ವತಃ ಪೋಷಣೆ ಮಾಡಲು ಸಮರ್ಥನಾಗಿದ್ದರೂ ಆಶ್ರಯಿಸಿ ಬಂದ ಬಂಧುಜನರನ್ನು ಪೋಷ್ಯವರ್ಗದವರನ್ನು ದ್ವೇಷದಿಂದ, ಲೋಭದಿಂದ ಅಥವಾ ಗರ್ವದಿಂದ ಪೋಷಿಸದೇ ಕರ್ತವ್ಯಚ್ಯುತನಾಗಿ ತಿರಸ್ಕಾರಮಾಡುವವನು ಅಪಕೀರ್ತಿಗೆ ಒಳಗಾಗುತ್ತಾನೆ. ಒಂದು ರೀತಿಯಲ್ಲಿ ಬದುಕಿದ್ದರೂ ಸತ್ತಂತೆ. ಇಂಥವನ ಹೆಸರನ್ನು ಹೇಳಲು ಯಾರೂ ಬಯಸುವುದಿಲ್ಲ. ಆದ್ದರಿಂದ ದೇವರು ಅನುಕೂಲ ಕೊಟ್ಟಾಗ ಆಶ್ರಯಿಸಿ ಬರುವವರನ್ನು ಪೋಷಿಸಬೇಕು.  

ಕೃಪೆ/ಮೂಲ ಸಂಗ್ರಹ: ವಿಜಯವಾಣಿ, ||ಶ್ರೀ ವಿಷ್ಣುರಹಸ್ಯ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ